ಹಸಿದು ಕೂತವರು - ಭಾಗ 11 (The crime story in kannada (The Quiet Before the Crime))

March 29, 2019 (6y ago)

ಯಾಕೆ‌ ಸುಳ್ಳು ಹೇಳ್ತೀರಾ!??,

ಮನೆಗೆ ಧೀರಜ್ ಬಂದು ಮುಟ್ಟಿದ್ದ.ಯಾಕೆ ತಡವಾಯಿತು!!? ಯಜಮಾನ್ರು ತೀರಿ ಹೋದರು ಅಂತ ಕೇರಿ ಎಲ್ಲ ಮಾತಾಡ್ತಾ ಇದೆ.ಹೌದಾ!? ಏನಾಯಿತು.ಎಂದು ಹೆಂಡತಿ ಸವಾಲೆಸೆದಳು.ಹೌದು ಕಣೇ, ಅದೇ ವಿಷಯ ನಿಂಗೆ ಹೇಳಿ ಹೋಗೋಣ ಅಂತ ಬಂದೆ‌.ಅದರಲ್ಲೂ ಯಜಮಾನ್ರು ಮನೇಲಿ ಯಾರೂ ಇಲ್ಲ.ನನ್ನ ಕಾವಲಿಗೆ ಬಿಟ್ಟು ಎಲ್ಲಾ ಆ ಕೊಲೆ ಆಗಿರೋ ಜಾಗಕ್ಕೆ ಹೋದರು.ನಾನು ಬಂದಿಲ್ಲ ಅಂತ ನೀನದೆಷ್ಟು ಗಾಬರಿ ಆಗಿರ್ತೀಯೇನೋ ಅಂತ ಹೆದರಿ ನಾನು ನಮ್ಮ ಗೆಳೆಯನ್ನ ಅಲ್ಲಿ ಬಿಟ್ಬಿಟ್ಟು ಬಂದೆ ಎಂದು ಧೀರಜ್ ವಿವರಿಸಿದ.ಅಲ್ಲಾ ಕಣ್ರೀ ಯಜಮಾನ್ರು ಅಷ್ಟು ನಂಬಿಕೆ ಇಟ್ಟು ನಿಮ್ಮನ್ನ ಅಲ್ಲಿ ಬಿಟ್ಟು ಹೋಗಿದಾರೆ ಅಂತೀರಾ.ಮತ್ಯಾಕೆ ನನ್ನ ನೋಡೋಕೆ ಬರ್ಬೇಕಿತ್ತು? ಯಾರ್ಗಾದ್ರೂ ಹೇಳಿ ಕಳ್ಸಿದ್ರೆ ನಡೀತಿರ್ಲಿಲ್ವಾ! ಕಷ್ಟ್ ಕಾಲಕ್ಕೆ ಯಜಮಾನ್ರು ನಮಗೆ ಆಗವ್ರೆ.ನಮ್ಮ ಜೀವನ ಪೂರ್ತಿ ಯಾರಿಗೂ ಕೇಡು ಬಯಸದೋರಲ್ಲ ಯಜಮಾನ್ರು,ಅಂತದ್ರಲ್ಲಿ ನೀವು ಇಲ್ಲಿ ಬಂದಿರೋದು ತಪ್ಪು ಅನ್ನಿಸ್ತಾ ಇಲ್ವಾ ನಿಮಗೆ!? ನೀನು ಹೇಳೋದ್ರಲ್ಲೂ ಅರ್ಥ ಇದೆ ಕಣೆ.ಆದ್ರೂ ಅವನ್ನ ಬಿಟ್ಟು ಬಂದಿದೀನಿ ಯಾವುದೇ ಭಯ ಇಲ್ಲ ಬಿಡು.ಇನ್ನೊಂದು ಅರ್ಧ ಘಂಟೆ ಇಲ್ಲೇ ಇದ್ದು ಮಗನ್ನ ಆಡಿಸ್ಗೊಂಡು ಹೋಗ್ತೀನಿ ಎಂದು ಒಳನಡೆದ.ಸ್ವಲ್ಪ ಹೊತ್ತು ಮಗನನ್ನು ಆಡಿಸಿ ಅರ್ಧ ಘಂಟೆಯೂ ಸರಿಯಾಗಿ ಆಗಿರಲಿಲ್ಲ ಆಗಲೇ ಹೊರಬಂದು.ಲೇ ಇವಳೇ,ನಾನು ಹೋಗ್ಬರ್ತೀನಿ ಕಣೇ.ಬೀಗ ಹಾಕಿಕೊಂಡು ಮಲ್ಕೋ ಎಂದವನೇ ಯಜಮಾನ್ರ ಮನೆ ಹತ್ರ ನಡೆದ.

ಲಾಕರ್ ನೋಡಿದವರು ದಂಗಾಗಿ ಬಿದ್ದಿದ್ದರು.ಅರ್ಧ ಘಂಟೆ ಸತತ ಬೆವರಿಳಿಸಿದ ಬೇಗೆ ಅವರನ್ನು ಸುಡುತ್ತಲಿತ್ತು.ದಿನವಿಡೀ ತಾವು ನಡೆಸಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿಲ್ಲ ಎಂದು ತಮ್ಮ ಮೇಲೇ ತಮಗೆ ಅಸಹ್ಯ ಎನಿಸಿತ್ತು. ಲಾಕರ್ ಒಳಗೆ ಎನೂ ಇರಲಿಲ್ಲ! ಲಾಕರ್ ಖಾಲಿಯಾಗಿತ್ತು.ವ್ಯರ್ಥ ಪ್ರಯತ್ನ ಇವರಿಂದ ನಡೆದಿತ್ತು.ತಡಮಾಡದೇ ಮನೆಯನ್ನೇ ಹುಡುಕಿ ನೋಡೋಣ ಎಂದುಕೊಂಡು ಇಡೀ ಮನೆಯನ್ನು ಹುಡುಕಿದರು.ಬಿಡುಗಾಸೂ ಸಿಗಲಿಲ್ಲ.ಬಸವಳಿದು ಹೋದರು. ಜೀವದ ಮೇಲೆ ಜಿಗುಪ್ಸೆ ಹೆಚ್ಚಾಯಿತು.ಕೋಪ ನೆತ್ತಿಗೇರಿ ಹೊರನಡೆದರು.ಮನೆಯ ಬೀಗದ ಹಾಗೇ ಇನ್ನೊಂದು ಬೀಗವನ್ನು ತರಲಾಗಿತ್ತು ,ಅದರಿಂದ ಮನೆಯನ್ನು ಬಂಧಿಸಿದರು.ಒಡೆದ ಬೀಗವನ್ನು ತಮ್ಮಲ್ಲಿ ಉಳಿಸಿಕೊಂಡರು.

ಹೊರಗೆ ಕಾಯುತ್ತಿದ್ದ ಈತ ಕೆಲಸ ಸಂಪೂರ್ಣ ಆಗಿರಬೇಕು ಎಂದುಕೊಂಡ.ಆ ಮೂವರು ಇವನನ್ನು ಬಿಟ್ಟು ಹೊರಟು ಹೋದರು.ನಿರಾಶೆಯ ಭಾವ ಅವರನ್ನು ಚುಚ್ಚಿ ಚುಚ್ಚಿ ,ಬಾಯಿಗೂ ಬೀಗ ಜಡಿದಿತ್ತು. ಸ್ವಲ್ಪ ಸಮಯದ ನಂತರ ಧೀರಜ್ ಬಂದು ಮುಟ್ಟಿದ.ಅಣ್ಣಾ ನಿಮ್ಮಿಂದ ತುಂಬಾ ಉಪಕಾರ ಆಯಿತು.ಎಂದು ಧನ್ಯತಾ ಮನೋಭಾವ ವ್ಯಕ್ತಪಡಿಸಿದ, ಧೀರಜ್.ನನ್ನ ಕೈಯಲ್ಲಿ ಆಗೋ ಸಹಾಯ ಮಾಡದೆ ಅದರಲ್ಲೇನಿದೆ ಮಹಾ!? ಹೇಳಿಕೇಳಿ ಒಟ್ಟಿಗೆ ಕೆಲಸ ಮಾಡೋರು ನಾವು.ಕಷ್ಟದಲ್ಲಿ ನೀವು ನಮಗೆ ಆಗಬೇಕು ,ನಾವು ನಿಮಗೆ ಆಗಬೇಕು. ಅದೇ ತಾನೇ ಬಾಳ್ವೆ ಅಂದ್ರೆ!? ಕತ್ತಲಾಗಿದೆ ನಾನೂ ಮನೆಗೆ ಹೋಗಬೇಕು.ನಾನಿನ್ನು ಹೊರಡ್ತೀನಿ ಕಣೋ.ನಿನ್ನ ಜೊತೆ ಉಳಿದಿಲ್ಲ ಎಂದು ಬೇಜಾರಾಗಬೇಡ.ಎಂದು ಹೇಳುತ್ತಾ ನಡೆದ.

ಅಪ್ಪಯ್ಯ ದೀಕ್ಷಿತ್ ಅವರ ಪತ್ನಿ ಗೋಗರೆಯುತ್ತ ನಡೆದಳು.ಅವರಿಲ್ಲದ ಜೀವನ ಹೇಗೆ!? ಅದರಲ್ಲೂ ಒಳಿತು ಮಾಡಿದವರಿಗೇ ಸಮಾಜದಲ್ಲಿ ಕೆಡುಕ ಬಯಸುವರು‌.ವ್ಯವಸ್ಥೆಗೆ ಸಿಕ್ಕ ಬೊಂಬೆ ಮಾಡೀಯಾರು ಎನ್ನ. ಜೀವನದುದ್ದಕ್ಕೂ ಜೊತೆಗಿರ್ತೀನಿ ಎಂದು ಸಪ್ತಪದಿ ತುಳಿದು,ಅದೇಕೆ ಇದೀಗ ಮಸಣದ ಉದರದಲ್ಲಿ ಮಲಗಿದ್ದೀರಾ!? ಎನೇನೋ ಆಕ್ರಂದನದ ಮಾತುಗಳು. ಆಕ್ರೋಶ ವ್ಯಕ್ತಪಡಿಸಿದರೂ ಕೇಳುವರಿಲ್ಲ.ಮಗ ಎನಿಸಿಕೊಂಡವ ಅದೇನೂ ಆಗೇ ಇಲ್ಲ ಎನ್ನುವಂತೆ ನಿಶ್ಯಬ್ದವಾಗಿ ಕುಳಿತಿದ್ದು ಇವಳನ್ನೂ ಇನ್ನೂ ಹೆಚ್ಚಿನ ಸಂಕಟಕ್ಕೆ ಎಡೆಮಾಡಿಕೊಟ್ಟಿತ್ತು.ಆದರೆ ಆದರೂ ಗೊತ್ತು ಅವನಂತರಾಳದ ಆರ್ಭಟ !?‌ ಗಂಡಸರ ಗುಣ ಅದು.ಅದೇನೇ ಆದರೂ ಕಲ್ಲುಬಂಡೆಯಂತೆ ಸಹಿಸಿ ಮನಸ್ಸಿನಲ್ಲೇ ಅದುಮಿಕೊಂಡು ಬಾಹ್ಯಲೋಕಕ್ಕೆ ಇನ್ನೇನೋ ಎಂಬಂತೆ ತೋರಿಸಿಕೊಳ್ಳುತ್ತಾರೆ. ಆದರೆ ಹೆಂಗಸರು ಹಾಗಲ್ಲ.ವ್ಯವಸ್ಥೆ ಜೊತೆಗೆ‌ ಅವರ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಬಾಹ್ಯ ಪ್ರಪಂಚದ ಸಹಾಯ ಹಸ್ತ ಯಾಚಿಸುವಂತವರು.

ಮನೆಗೆ ಬಂದ ಮೂವರ ಕಥೆ ಗಂಭೀರವಾಗಿತ್ತು.ಅಪ್ಪಯ್ಯ ದೀಕ್ಷಿತ್ ಅವರನ್ನು ಕೊಂದಿದ್ದು ಅನಾವಶ್ಯಕ ಎಂದು ನೆನಪಿಸಿ ಕೊಂಡಾಗಲೆಲ್ಲ, ಜೀವಂತ ಬೆಂದು ಹೋಗುತ್ತಿದ್ದರು. ಮನುಷ್ಯನ ಜೀವನ ರೀತಿ ಇದು. ಅಕಸ್ಮಾತ್ ಅವರಿಗೆ ಲಾಕರ್ ನಲ್ಲಿ ಹಣ ದೊರಕಿದ್ದರೆ ಇವರುಗಳ ಯೋಚನೆಗಳೇ ಬೇರೆ ಇರುತ್ತಿತ್ತು. ಆದರೆ ಈಗ ತಾವು ಮಾಡಿದ ತಪ್ಪಿನ ಅನುಭವ ತಮ್ಮನ್ನೇ ನುಂಗಿ ಹಾಕುವಷ್ಟರ ಮಟ್ಟಿಗೆ ಬೆಳೆದು ನಿಂತಿತ್ತು. ಸಮಯಕ್ಕೆ ಸರಿಯಾಗಿ ‌ಇನ್ನೊಬ್ಬ ಬಂದ.ಆನಂದದ ಅತಿರೇಕ ಹೇಳ ತೀರದು.ಮುಂದಿನ ಜೀವನವನ್ನು ನೆನೆಸಿಕೊಂಡ ಕ್ಷಣವೆಲ್ಲ ಅವನಿಗೆ ರೋಮಾಂಚನವಾಗುತ್ತಿತ್ತು.ಬಂದವನೇ ಖುಶಿಯಿಂದ ಹೋಗಿ ಅವರೆದುರೇ ಕುಣಿದಾಡಿದ.ಸುಮ್ಮನೆ ಇವರೆಲ್ಲರೂ ಕುಳಿತಿರುವುದು ನೋಡಿ ಚಕಿತನಾದ. ಕ್ಷಣಕಾಲ ಸುಧಾರಿಸಿಕೊಂಡವನೇ ಹಣ ಎಲ್ಲಿ? ಎಂದು ಮೂವರನ್ನೂ ಪ್ರಶ್ನಿಸಿದ.ಯಾರೂ ಬಾಯಿ ತೆರೆಯಲಿಲ್ಲ.ಹತ್ತಿರ ಬಂದು ಏನಾಯಿತು ಹಣ ಎಲ್ಲಿ ಎಂದು ಇನ್ನೊಬ್ಬನನ್ನು ಹಿಡಿದೆಳೆದ.ಲಾಕರ್ ನಲ್ಲಿ ಏನೂ ಇಲ್ಲ ಕಣೋ!! ಅದಕ್ಕೆ ನಿನಗೆ ತಿಳಿಸದೇ ಬಂದಿದ್ದು ಎಂದ."ಇಲ್ಲ ನೀವು ಸುಳ್ಳು ಹೇಳ್ತಾ ಇದೀರಾ! ನನ್ನನ್ನೂ ನಂಬಿಸಿ ಸಿಕ್ಕ ಹಣದಲ್ಲಿ ನೀವು ಮೂವರೇ ಪಾಲು ಮಾಡ್ಕೊಳ್ಳೋಣ ಅಂದ್ಕೊಂಡ್ರಾ!?? ಎಲ್ಲಿದೆ ಅಂತ ಹೇಳ್ಬಿಡಿ"