ಬಿಕ್ಕಳಿಸುತಿದೆ ಮೋಹ
"ನಿಜ ಕಣೋ ನಾವು ನಿನ್ನನ್ನ ಮೋಸ ಮಾಡಿ ಪಡ್ಕೊಳ್ಳೋದಾದರೂ ಏನು? ಆ ಹಣದ ಆಸೆಗೋಸ್ಕರ ನಮ್ಮ ಸ್ನೇಹ ಮರೆತು ನಿನಗೆ ಮೋಸ ಮಾಡುವವರಲ್ಲ ನಾವು! " ಓಹೋ ಉಂಡ ಮನೆ ಯಜಮಾನರನ್ನ ಕೊಲೆ ಮಾಡುವಾಗ ಇದ್ದ ಕಟಕುತನದ ಮುಂದೆ ಎಲ್ಲಿ ಹೋಗಿತ್ತು ನಿಮ್ಮ ಈ ವೇದಾಂತಗಳು. ಆಸೆ ಅನ್ನೋದು ಉಂಡ ಮನೆಗೆ ದ್ರೋಹಾನೂ ಮಾಡ್ಸುತ್ತೆ,ನಮ್ಮ ನಡುವೆ ಇರೋ ಸ್ನೇಹಕ್ಕೂ ಬೆಂಕಿ ಹಚ್ಚುತ್ತೆ.ಈ ವೇದಾಂತ ಎಲ್ಲಾ ಮಾತಾಡೋದ್ ಬಿಟ್ಟ್ಬಿಟ್ಟು ಹಣ ಎಲ್ಲಿದೆ ಅನ್ನೋದನ್ನ ಹೇಳಿ,ನನ್ನ ಹತ್ರಾನೇ ವೇದಾಂತ ಮಾತಾಡೋಕ್ ಬರ್ತಾರೆ."ನೋಡು ನೀನು ನಮ್ಮ ಮೇಲೆ ನಂಬಿಕೆ ಇಲ್ಲದೇ ಇರೋ ತರ ಮಾತಾಡ್ತಾ ಇದೀಯಾ.ನಿನಗೆ ನಂಬಿಕೆ ಇಲ್ಲ ಅಂದರೆ ಸುಮ್ಮನೆ ಇದ್ಬಿಡು.ಅದನ್ನ ಬಿಟ್ಟು ನಮ್ಮ ನಡವಳಿಕೆಯ ಬಗ್ಗೆ ನಿನ್ನಿಂದ ಹೇಳಿಸಿಕೊಳ್ಳುವ ದುರಾದೃಷ್ಟ ನಮಗಿನ್ನೂ ಬಂದಿಲ್ಲ." ಹೇಳ್ತೀನಿ ಕಣ್ರೋ ಹೇಳ್ತೀನಿ ನಿಮ್ಮ ಬಗ್ಗೆನೂ ಮಾತಾಡ್ತೀನಿ ನಿಮ್ಮ ನಡವಳಿಕೆ ಬಗ್ಗೆನೂ ಮಾತಾಡ್ತೀನಿ. ಸ್ನೇಹಾನೇ ಮರೆತು ಹಣಕ್ಕೆ ಆಸೆಪಡ್ತಾ ಇರೋ ನಿಮ್ಮ ಜೊತೆ ಇರೋದಕ್ಕಿಂತ ಎಲ್ಲಾದ್ರೂ ಬೇರೆ ಸ್ಥಳಕ್ಕೆ ಒಂಟಿಯಾಗಿ ಹೋಗೋದೇ ವಾಸಿ.! ಬರ್ತೀನಿ,ಜೀವನದಲ್ಲಿ ಹಣಕ್ಕಿಂತ ಮುಖ್ಯ ಸ್ನೇಹ ಅನ್ನೋದು ಯಾವಾಗ ಗೊತ್ತಾಗುತ್ತೋ ಅವತ್ತು ನನ್ನನ್ನು ಬಂದು ನೋಡಿ.(ನಾನ್ ಜೀವಂತ ಇದ್ದೆ ಅಂದರೆ ಮಾತ್ರ).ಅವನು ಹೊರಟು ಹೋದ.
ಜೀವನದಲ್ಲಿ ನಂಬಿಕೆ,ವಿಶ್ವಾಸ,ಅರ್ಥ್ಯೆಸಿಕೊಳ್ಳುವ ಗುಣಗಳನ್ನು ಬಾಳ ಸಂಗಾತಿಯಾಗಿಸಿ ಕೊಂಡಿರಬೇಕು.ಅವುಗಳು ನಮ್ಮ ಮೇಲೆ ಮುನಿಸಿಕೊಂಡ ಕ್ಷಣವೇ ಜೀವನ ವ್ಯವಸ್ಥೆಯ ಒಂದು ಭಾಗ ಸಡಿಲಗೊಂಡು,ಸಮತೋಲನವು ಸಂಕೀರ್ಣ ಸ್ಥಿತಿ ತಲುಪುತ್ತದೆ. ಇಲ್ಲಿಯೂ ಅದೇ ಆಗಿದ್ದು. ಜೀವನದ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದರೂ ಆ ಮೂವರು ಹಣದ ಮುಂದೆ ಕುಬ್ಜರಾಗಿ ಕಂಡುಬಂದರು.
ಅದಾಗಲೇ ಬೆಳಿಗ್ಗೆ 5 ಘಂಟೆ ಆಗಿತ್ತು.ಇವರುಗಳು ನಿದ್ರೆ ಹೋಗಿದ್ದರು.ಗಾಡಿಯ ಡ್ರೈವರ್ ಇವರನ್ನು ಎಬ್ಬಿಸಿದ.ಅಪ್ಪಯ್ಯ ದೀಕ್ಷಿತ್ ಅವಸಾನ ಹೊಂದಿದ ಜಾಗವನ್ನು ತಲುಪಿದ್ದರು.ರಕ್ತಸಿಕ್ತ ವಾಗಿ ಬಿದ್ದಿದ್ದ ಅಪ್ಪಯ್ಯ ದೀಕ್ಷಿತ್ ಅವರ ದೇಹವು ಛಿದ್ರವಾಗಿತ್ತು.ನೋಡುತ್ತಿದ್ದವರ ಮನಸ್ಸು ಹರಿದು ಹಂಚಿ ಹೋಗಿತ್ತು. ಅಪ್ಪಯ್ಯ ದೀಕ್ಷಿತ್ ಅವರನ್ನು ಕರೆದುಕೊಂಡು ಬಂದ ಡ್ರೈವರ್ ನ ಹೆಣ ಅಲ್ಲಿಯೇ ಸ್ವಲ್ಪ ದೂರದಲ್ಲಿ ಬಿದ್ದಿತ್ತು. ಅಪ್ಪಯ್ಯ ದೀಕ್ಷಿತರ ಕೊಲೆ ಡ್ರೈವರ್ ಮಾಡಿದ್ದು ಎಂಬುದು ಸ್ಪಷ್ಟವಾಗಿ ಗೋಚರಿಸುವಂತಿತ್ತು.ಅಲ್ಲಿ ನಡೆದ ಸಂಗತಿಯ ಊಹೆ ಇವುಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿತ್ತು.ದೀಕ್ಷಿತ್ ರನ್ನು ನೋಡ ನೋಡುತ್ತಲೇ ಅಳು ಬಿಕ್ಕಳಿಸಿ ಬರುತ್ತಲಿತ್ತು.ದೀಕ್ಷಿತ್ ರ ಸನಿಹಕ್ಕೆ ಹೋಗಿ ಬಿಕ್ಕಳಿಸುತ್ತ ಕೂತಳು ಅವರ ಪತ್ನಿ. ಅವನೂ ಸನಿಹಕ್ಕೆ ಬಂದು ಅಲ್ಲಿಯವರೆಗೆ ಕಟ್ಟಿಟ್ಟಿದ್ದ ದುಃಖವನ್ನು ಒಮ್ಮೆಲೇ ಹೊರಹಾಕಿ ದುಃಖಿತನಾದ.ಡ್ರೈವರ್ ಸನಿಹ ಬಂದು ನಿಂತು ಸ್ವಲ್ಪ ಹೊತ್ತಿನ ಮಟ್ಟಿಗೆ ಸಮಾಧಾನ ಸೂಚಿಸಿದ.ತದನಂತರ ಗಾಡಿಯ ಹಿಂದೆ ಬಂದು ಸಿಗರೇಟ್ ಎಳೆಯುತ್ತಾ ನಿಂತ.
ಧೀರಜ್ ನಿದ್ರೆಯ ಅಮಲಿನಲ್ಲಿ ಅದಾಗಲೇ ಜಾರಿದ್ದ.ಅದು ಜೀವವನ್ನೂ ಮರೆತು ಮಾಡುವ ನಿದ್ರೆಯಲ್ಲ.ಬಾಹ್ಯ ಪ್ರಪಂಚದ ಆಗು ಹೋಗುಗಳಿಗೆ ಸ್ಪಂದಿಸುತ್ತಾ ವಿಶ್ರಮಿಸುವಂತದ್ದು.ಅವನ ಪತ್ನಿಗೂ ತಿಳಿದಿತ್ತು.ಅವಳು ೫ ಘಂಟೆಗೇ ಎದ್ದು ಎಲ್ಲ ಕಾರ್ಯಗಳನ್ನು ಮುಗಿಸಿ ಗಂಡನಿಗಾಗಿ ತಿಂಡಿಯ ವ್ಯವಸ್ಥೆ ಮಾಡಿದಳು.ಪಕ್ಕದ ಮನೆಯ ಹುಡುಗನಿಗೆ ಹೇಳಿ ಕ್ಯಾರಿಯರ್ ಬಾಕ್ಸ್ ಗೆ ಹಾಕಿ ಕಳುಹಿಸಿದಳು.