ಲಾಕಪ್
ಊರಿನಲ್ಲಿ ಜನರು ಗುಲ್ಲೆಬ್ಬಿಸಿ ಕುಣಿದರು.ಜನರೇ ಹಾಗೆ ಅದೇನೇ ಆಗಲಿ,ಯಾರಾದರೊಬ್ಬರ ತಪ್ಪಿನ ಕೂದಲು ಸಿಕ್ಕರೂ ಅದರ ಡಿ.ಎನ್.ಎ ಟೆಸ್ಟ್ ಮಾಡದೆಯೇ ತಾವುಗಳೇ ಒಂದು ನಿರ್ಧಾರಕ್ಕೆ ಬಂದುಬಿಡುತ್ತಾರೆ.ಅದು ತಮ್ಮಲ್ಲಿಯೇ ಉಳಿಸಿಕೊಂಡರೆ ಒಳಿತು.ಆದರೆ ತಮ್ಮಲ್ಲೇ ಉಳಿಸಿ ಕೊಂಡು ಅದನ್ನು ಕೊಂದು ವಿಷಯದ ಕೊಲೆಗೆ ಕಾರಣೀಭೂತರಾಗಲು ಇವರಿಚ್ಛಿಸುವುದಿಲ್ಲ.ಹೊರತಾಗಿ ಪರರೆದುರು ಸಾರಿ ಸಾರಿ ಹೇಳಿಕೊಂಡು ಬಂದು, ತಮಗದೆಷ್ಟು ತಿಳಿದಿದೆ ಎಂದು ಪರರಿಗೆ ತಿಳಿಸುವ ಹಂಬಲ ಅವರದ್ದು. ಆ ಹಂಬಲದ ತೀರಿಕೆಗಾಗಿ ಅದೆಷ್ಟೋ ವಿವಿಧ ತೆರನಾದ ಮಸಾಲೆಗಳನ್ನು ಅದಕ್ಕೆರಚಿ ವಿಷಯದ ರುಚಿ ಹೆಚ್ಚಿಸುವ ಕಿಲಾಡಿಗಳು.ಊರಿನಲ್ಲಿ ಬಹುಬೇಗ ಈ ವಿಷಯ ಹಬ್ಬಿತು. ವಿಷಯ ಮನೆಯವರೆಗೂ ಬಂತು.ಸುದ್ದಿ ಕೇಳಿದ ಅನಸೂಯಾಳ ಎದೆ ಝಲ್ಲೆಂದಿತು.ಮಗನ ಬಗೆಗಿನ ಗಮನ ಪಕ್ಕಕ್ಕಿರಿಸಿ ಯೋಚನಾ ಮಗ್ನಳಾದಳು.ಒಂದೈದು ನಿಮಿಷ ತಡೆದು ಮಗನನ್ನು ಪಕ್ಕದ ಮನೆಯವರ ವಶವಾಗಿಸಿ ಹೊರಟು ಹೋದಳು.ಪೋಲಿಸ್ ಠಾಣೆಯತ್ತ ಇವಳ ಕಾಲು ಸಾಗಿತು.ಮನಸ್ಸು ಧೀರಜ್ ಸಮೀಪಿಸುವ,ವಿಷಯದ ಪೂರ್ಣತೆ ತಿಳಿದುಕೊಳ್ಳುವ ಹತ್ತಿರದಲ್ಲಿತ್ತು. ಸಾಗುವ ದಾರಿಗಳು ಕಷ್ಟವೆನಿಸಿತ್ತು.ಊರ ಜನರ ಮಾತುಗಳು ಕೇಳಿಬರುತ್ತಿದ್ದವು. ಇವಳಿಗೆ ಬೇಕೆಂದೇ ಕೆನ್ನೆಗೆ ಬಂದು ಹೊಡೆಯುವಂತಿದ್ದವು ಅವರ ಮಾತುಗಳು. ಆದರೇ ಊರ ಜನರು ಅದೆಷ್ಟೇ ಮಾತನಾಡಲಿ, ಪತಿಯ ಮೇಲೆ ಅದೇನೋ ನಂಬಿಕೆ.ಅದೇನೋ ವಿಶ್ವಾಸ.ವಿಷಯ ಏನೋ ಬೇರೆ ಇದೆ, ತನ್ನ ಗಂಡ ಹೀಗೆ ಮಾಡಿರಲಿಕ್ಕೆ ಸಾಧ್ಯವಿಲ್ಲ. ಸಾಂದರ್ಭಿಕ ಆರೋಪಿ ಇವನೆಂದು ಸಂಪೂರ್ಣ ನಂಬಿಕೆ.ಆದರೂ ಭಯವೆನ್ನುವ ಅಂಶ ಸಂದೇಹವನ್ನೂ ಕೊಂಚ ನಂಬಿಸುತ್ತಲಿತ್ತು. ಉಟ್ಟ ಬಟ್ಟೆಯಲ್ಲಿ ಅವಳಿದ್ದ ಅರಿವೂ ಅವಳಿಗಿರಲಿಲ್ಲ. ಪೋಲಿಸ್ ಠಾಣೆಯ ಎದರು ಬಂದು ನಿಂತಳು.
' ಯಾರ್ರೀ ಅವಳು ಅಲ್ಲೇನ್ ಗಲಾಟೆ ಮಾಡ್ತಿದಾಳೆ. ಕಳಿಸ್ರೀ ಒಳಗೆ ' ಎಂದು ಇನ್ಸ್ಪೆಕ್ಟರ್ ಖೇರ್ ಕಾನ್ಸ್ಟೇಬಲ್ ಗೆ ಗದರಿದರು. ಸಾರ್ ಕರೀತಾ ಇದಾರೆ ನಮ್ಮತ್ರ ಏನ್ ಗಲಾಟೆ ಮಾಡ್ತೀಯಾ ! ಹೋಗಿ ಸಾರ್ ಏನಂತಾರೆ ಅಂತ ಅವರನ್ನೇ ಕೇಳು.ಅವರಿಗೇ ಈ ವಿಷಯ ಎಲ್ಲ ಹೇಳು ನಡಿ.! ಎಂದು ಕಾನ್ಸ್ಟೇಬಲ್ ಹೇಳಿದರು. ಅನಸೂಯಾ ನಡೆಯುತ್ತ ಬಹುವೇಗದಿಂದ ಸರ್ ಮುಂದೆದುರು ಬಂದು ನಿಂತಳು.ಅಲ್ಲೇ ಲಾಕಪ್ ನಲ್ಲಿ ಇದ್ದ ಧೀರಜ್ ಕಂಡು ಮರುಕದಿಂದ ಅತ್ತ ನೋಡಿದಳು.ಬಿಕ್ಕಳಿಸಿ ಬಂತವಳಿಗೆ ದುಃಖ . ಕ್ಷಣಕ್ಕೇ ದುಃಖವನ್ನು ಅವಳೇ ಅಮುಕಿ ಹಿಡಿದು,
' ಸಾರ್ ಊರಲ್ಲಿ ಅದೇನೇನೋ ಮಾತಾಡ್ತಾ ಇರ್ಬೋದು ನನ್ನ ಗಂಡನ ಬಗ್ಗೆ, ಆದರೆ ವಿಷಯ ಏನೂ ಅಂತ ನನಗೆ ಗೊತ್ತು. ರಾತ್ರಿಯ ವೇಳೆ ಅವರು ಅಲ್ಲೇ ಕಾಯುತ್ತ ಕೂತಿದ್ದಾರೆ. ಯಜಮಾನ್ರು ಅಂದರೆ ಅವರಿಗೆ ಬಹು ಪ್ರೀತಿ. ಅದ್ಯಾವ ಕಾಲದಿಂದಲೂ ಹೊಟ್ಟೆಗೆ ಏನೂ ಇಲ್ಲದ ದಿನಗಳಲ್ಲಿ,ಈಗೇನು ನಮ್ಮಲ್ಲಿ ಇದೆ ಎಂದೇನೂ ಅಲ್ಲ. ನಾವು ಮುಜುಗರದಿಂದ ಅಲ್ಲಗಳೆದರೂ ಕರೆದು ಊಟಕ್ಕಿತ್ತವರು, ಯಜಮಾನ್ರು. ಅಂತಹವರಿಗೆ ದ್ರೋಹ ಮಾಡುವ ಕಟುಕ ಜನ ನಾವಲ್ಲ. ಹೊಟ್ಟೆಗೆ ಏನೂ ಇಲ್ಲದೆ ಹೋದರೂ ಗಂಜಿ ಕುಡಿದು ಬದುಕುವ ಯೋಗ್ಯತೆ ಇರೋರು ನಾವು. ಅಷ್ಟಿಲ್ಲದೇ ಯಜಮಾನ್ರು ಆಗಲಿ ಅಥವಾ ಅವರ ಮಗನೋರು ಚಿಕ್ಕ ಯಜಮಾನ್ರಾಗಲೀ ಅದೆಷ್ಟೋ ಬಾರಿ ಮನೆಯನ್ನು ಬಿಟ್ಟು ನಮ್ಮವರನ್ನು ಕಾವಲಿಗಿರಿಸಿದ್ದು ಇದೆ.ಅಷ್ಟೆಲ್ಲಾ ಮಾಡ್ತಾರೆ ಅನ್ನೋದಾದರೆ ಅದರಲ್ಲೇ ತಿಳಿಯುತ್ತೆ ಅದೆಷ್ಟು ಪ್ರಾಮಾಣಿಕತೆ ಇದ್ದಿರಬೇಕು ಎಂದು. ಸಾರ್ ನಮ್ಮವರನ್ನ ಬಿಟ್ಟು ಬಿಡಿ.ನಿಮ್ಮ ಕಾಲಿಗೆ ಬಿದ್ದು ಕೇಳ್ತಾ ಇದೀನಿ ' ಎಂದು ಅನಸೂಯಾ ಅಂಗಲಾಚಿದಳು.
ಇನ್ಸ್ಪೆಕ್ಟರ್ ಖೇರ್ ಸ್ವಭಾವವೇ ವಿಚಿತ್ರ. ಅವರು ಯಾವ ಸಮಯದಲ್ಲಿ ಹೇಗೆ ಮನಸ್ಸು ಮಾಡ್ತಾರೋ ಹೇಳೋಕಾಗಲ್ಲ.ಅದೇನೂ ಅವರ ಕೆಲಸದಿಂದ ಬಂದಿದ್ದಲ್ಲ, ಬದಲಾಗಿ ಸ್ವಭಾವತಃ ವೈಚಿತ್ರ್ಯ ಒಳಗೊಂಡವರು. ' ಇಲ್ಲಿ ಹೇಳೋದ್ ಸ್ವಲ್ಪ ಕೇಳಮ್ಮ, ನಮಗೂ ಗೊತ್ತಾಗುತ್ತೆ ನಿಮ್ಮ ಸಂಕಷ್ಟ ಏನೂ ಅಂತ. ನಿಮ್ಮನ್ನು ಒಬ್ಬರನ್ನೇ ಅಲ್ಲ ನಾವು ನೋಡಿರೋದು.ನನ್ನ ಅನುಭವದಿಂದ ಹೇಳ್ತಾ ಇದೀನಿ,ನಿಮಗೆ ನಿಮ್ಮ ಗಂಡನ ಬಗ್ಗೆ ಅದೆಷ್ಟೇ ಗೊತ್ತಿದೆ ಎಂದು ನೀವಂದುಕೊಂಡರೂ ನಿಮಗೂ ಗೊತ್ತಿಲ್ಲದ ವಿಷಯ ಪರರಿಗೆ ಗೊತ್ತಿರುತ್ತೆ.ಅವರಿಗೂ ತಿಳಿಯದ ವಿಷಯ ನಿಮಗೆ ತಿಳಿದಿರುತ್ತೆ. ಈಗ ಈ ವಿಷಯ ನಿಮಗೆ ತಿಳಿದಿದೆಯೋ ಅಥವಾ ಅವರಿಗೆ ತಿಳಿದಿದೆಯೋ ನಂಗೊತ್ತಿಲ್ಲ.ಆದರೆ ಅದನ್ನು ನಿರ್ಧಾರ ಮಾಡೋಕೆ ಅಂತಾನೆ ನ್ಯಾಯಾಲಯ ಇದೆ. ನ್ಯಾಯದೇವತೆ ಇದ್ದಾಳೆ.ಅಲ್ಲಿ ಏನೂ ಅಂತ ಸಂಪೂರ್ಣವಾಗಿ ಹೇಳಬಹುದು. ಇದೇನು ಕೇಸ್ ಅಂತೂ ಅಲ್ಲ. ಸ್ವಲ್ಪ ಸಮಾಧಾನ ಇರಿಸಿಕೊಂಡರೆ ಏನೇನು ಆಗುತ್ತೆ ಅಂತ ನೋಡೋಣ. ಇವನ್ನ ಕೋರ್ಟ್ ನಲ್ಲಿ ಪ್ರೊಡ್ಯೂಸ್ ಮಾಡ್ತೀವಿ. ನಂತರ ಅದೇನು ಅಗುತ್ತೋ ನೋಡೋಣ. ಅಕಸ್ಮಾತ್ ವಿಚಾರಣೆ ಅಥವಾ ಇನ್ವಸ್ಟಿಗೇಷನ್ ಪೂರ್ತಿ ನಡೆಸ ಬೇಕೆಂದು ಕೋರ್ಟ್ ತೀರ್ಪು ನೀಡಿದರೆ ನಿಮ್ಮನ್ನೂ ಕರೆದು ಎನ್ಕ್ವೈರಿ ಮಾಡ್ತೀವಿ ಅವಾಗ ಅದೇನು ಅಂತ ಹೇಳಿ. ಎಫ್. ಐ.ಆರ್ ದಾಖಲಿಸಲಾಗಿದೆ. ಕೇಸ್ ಹಿಂದಕ್ಕೆ ಪಡೆಯೋ ಹಕ್ಕು ಇರೋದು ಅಪ್ಪಯ್ಯ ದೀಕ್ಷಿತ್ ಅವರ ಪತ್ನಿ ಅವರಿಗೆ ಮಾತ್ರ .ಯಾಕೆಂದರೆ ಅವರೇ ಅಲ್ವಾ ಕಂಪ್ಲೇಂಟ್ ರಿಜಿಸ್ಟರ್ ಮಾಡಿಸಿದೋರು. ' ಎಂದು ಇನ್ಸ್ಪೆಕ್ಟರ್ ಖೇರ್ ವಿಸ್ತರಿಸಿದರು.