ನಾನಾ ಕ್ರಿಮಿನಲ್!?
ಮುಂದುವರೆದ ಭಾಗ.!
ಸುಮಾರು ಸಮಯ ೬ ಘಂಟೆ, ಕಾಲಿಂಗ್ ಬೆಲ್ ಯಾರೋ ತನ್ನ ಎದೆಯ ಮೇಲೇ ಒತ್ತಿದಂತಾಯಿತು.ಕೆಲವೊಮ್ಮೆ ಹೀಗಾಗುತ್ತೆ ಗಾಢ ನಿದ್ರೆಯಲ್ಲಿರುವಾಗ ಸತ್ಯಭಾಗವನ್ನೂ ಕನಸಿನಲ್ಲಿ ಕಂಡಂತೆ,ಅಥವಾ ಕನಸನ್ನೇ ವಾಸ್ತವವಾಗಿ ಎದುರಿಸಿದಂತೆ. ಅವಳು ೫ ಘಂಟೆಗೇ ಎದ್ದು ತನ್ನ ದಿನವಹಿ ಕೆಲಸದ ಶೇಷಗಳನ್ನು ಮುಗಿಸುತ್ತಾ ಇದ್ದಳು. ಕಾಲಿಂಗ್ ಬೆಲ್ ಸಪ್ಪಳ ಕೇಳಿ ಕೆಲಸವನ್ನು ಅಲ್ಲಿಗೇ ನಿಲ್ಲಿಸಿ, ಬಾಗಿಲ ಬಳಿ ಬಂದು ನಿಂತು ಮುಖವನ್ನು ಸೀರೆಯಿಂದ ಒರೆಸಿಕೊಂಡು ಬಾಗಿಲು ತೆರೆದಳು.ಪೋಲಿಸ್ ಪೇದೆಯೊಬ್ಬ ನಿಂತಿದ್ದು ನೋಡಿದ ಎದೆ ಬಡಿತ, ವೇಗ ಹೆಚ್ಚಿಸಿಕೊಂಡು ಓಡತೊಡಗಿತ್ತು. ಏನಮ್ಮ ಅರವಿಂದ್ ಅನ್ನೋರ ಮನೆ ಇದೇ ತಾನೆ.ಮುಂದುವರೆದು , ಅವರನ್ನ ಬರೋಕ್ ಹೇಳಿ ಎಂದ ಪೇದೆ.ಅವಳೋ ದಿಗಿಲಿನ ಲೋಕದಲ್ಲಿ ಯೋಚನೆ ಮಾಡುತ್ತಾ ಅವನ ಮುಖವನ್ನೇ ನೋಡುತ್ತಾ ನಿಂತಳು.ಇತ್ತ ಪೇದೆ ಅವಳನ್ನು ಮಾತನಾಡಿಸಲೆಂದೇ ಬಾಯಿ ತೆರೆಯುವ ಮುನ್ನ ಒಳಗಿನಿಂದ ಅವನು ಬಂದಿದ್ದನ್ನು ನೋಡಿ ತನ್ನ ಬಾಯಿಗೆ ಬೀಗ ಜಡಿದು ಸುಮ್ಮನಾದ.ಏನ್ ಸಾರ್ ನಮ್ ಮನೆ ದಾರಿ ಹಿಡಿದು ಬಂದಿದ್ದೀರಾ!? ಏನ್ ಸಮಾಚಾರ ಎಂದು ಕೇಳಿದ.ಸಮಾಚಾರ ಎಲ್ಲಾ ಪೋಲಿಸ್ ಸ್ಟೇಷನ್ ನಲ್ಲಿ ವಿವರವಾಗಿ ಹೇಳ್ತೀವಿ ಬನ್ನಿ ಸಾರ್ ಎಂದು ಇವನ ಕೈ ಹಿಡಿದು ಪೇದೆ ಎಳೆದ .ಯಾಕೆ ಸರ್ ನಾನೇನ್ ಮಾಡದೆ,ನನ್ನ ಯಾಕೆ ಕರೆದುಕೊಂಡು ಹೋಗ್ತಾ ಇದ್ದೀರಿ ಅಂತ ಎನೇನೋ ಇವನು ಬಡಬಡಿಸ್ತಾ ಇದ್ದ. ಪೋಲಿಸ್ ಪೇದೆ ಇದ್ಯಾವುದಕ್ಕೂ ತಲೆಗೊಡದೆ ಜೀಪ್ ನಲ್ಲಿ ಇವನನ್ನು ಕೂರಿಸಿ ಪೋಲಿಸ್ ಠಾಣೆಯತ್ತ ವಾಹನಕ್ಕೆ ದಿಕ್ಕು ತೋರಿಸಿದರು.
ಅವನು ಎದ್ದು ಹೊರಬಂದ ಆ ಕ್ಷಣವೇ ಈಕೆ ಯೋಚನೆಯಿಂದ ಹೊರಬಂದಿದ್ದಳು.ಈಕೆ ಏನುಮಾಡ್ತಾಳೆ ನಿಸ್ಸಹಾಯಕಳು. ದುಗುಡ ದುಮ್ಮಾನದಿಂದ ಅವರು ಹೋಗುವುದನ್ನೇ ನೋಡುತ್ತ ನಿಂತಳು.ಬಾಗಿಲನ್ನೂ ಹಾಕದೇ ಹಾಗೆಯೇ ಅದೇ ಯೋಚನೆಯನ್ನು ಹೊತ್ತು ಒಳಹೋಗಿ ಕೂತಳು.ಅವನು ಏನು ಮಾಡಿರಬಹುದು? ಅದ್ಯಾಕೆ ಪೋಲಿಸ್ ಬಂದು ಇವನನ್ನು ಎಳೆದೊಯ್ದರು? ಹೀಗೆ ಹಲವು ಯೋಚನೆ ಅವಳ ತಲೆಯಲ್ಲಿ ಮನೆಮಾಡಿಬಿಟ್ಟವು.ಆ ದಿನ ಪೂರ್ತಿ ಹೀಗೆಯೇ ಮಾಡುವ ಕೆಲಸದ ಮೇಲೆ ಧ್ಯಾನ ಇಲ್ಲದೇ ಬೇರೊಂದು ಯೋಚನೆ ಮಾಡಿದರೆ ಆ ಕೆಲಸ ಅದೆಂದಿಗೂ ಸಂಪೂರ್ಣ ಯಶಸ್ಸು ಕಾಣಲು ಸಾಧ್ಯವಿಲ್ಲ. ಅವಳು ಮಾಡಿದ ಕೆಲಸದ ಅರ್ಧ ಭಾಗ ಮಾಡಿಯೂ ಮಾಡದಂತಾಗಿತ್ತು.
ಪೋಲಿಸ್ ಠಾಣೆಯ ಬೆಂಚಿನ ಮೇಲೆ ಅರವಿಂದ್ ಕೂತಿದ್ದ.ಪೋಲಿಸ್ ಇನ್ಸ್ಪೆಕ್ಟರ್ ಅದ್ಯಾವುದೋ ಕೇಸ್ ಮೇಲೆ ಹೊರಗೆ ಹೋಗಿದ್ದರು.ಇನ್ಸ್ಪೆಕ್ಟರ್ ಬರುವವರೆಗೂ ಇಲ್ಲಿಯೇ ಕೂತಿರಬೇಕೆಂದು ಹೇಳಿದ ಪೇದೆ ತಮ್ಮ ಕೆಲಸದಲ್ಲಿ ಲೀನರಾದರು. ಅರವಿಂದ್ ಚಡಪಡಿಸುತ್ತ ಕೂತಿದ್ದ.ಅವನು ಕೂತಿದ್ದರೂ ಅವನ ದೇಹದ ಭಾಗಗಳು ಚಲಿಸುತ್ತಿದ್ದವು ದಿಗಿಲಿನಿಂದ,ಚಡಪಡಿಕೆಯಿಂದ.ಎರಡು ತಾಸು ಕಾದ ನಂತರ ಅರವಿಂದ್ ಎದ್ದು ಪೇದೆಯತ್ತ ನಡೆದು ಸರ್ ಇನ್ನೂ ಎಷ್ಟು ಹೊತ್ತಾಗುತ್ತೆ?ನಮಗೂ ಬೇರೆ ಕೆಲಸಗಳಿರ್ತವೆ.ಅದರಲ್ಲೂ ನೀವು ನನ್ನ ಎಳೆದುಕೊಂಡು ಬಂದಿರೋದನ್ನ ನಮ್ಮ ಏರಿಯಾ ಜನ ಎಲ್ಲಾ ನೋಡಿದಾರೆ ಈಗ ಏನೇನೋ ತಿಳಿದುಕೊಂಡು ಅಪಹಾಸ್ಯ ಮಾಡುವ ಮುಂಚೆ ನಾನು ಅಲ್ಲಿದ್ದರೆ ನಡೆದ ಸಂಗತಿ ತಿಳಿಸಬಹುದು ಎಂದ.ಪೋಲಿಸ್ ಪೇದೆಗೆ ಕೋಪ ನೆತ್ತಿಗೇರಿತು ಏನಯ್ಯ ನಮಗೇನು ಕೆಲಸ ಇಲ್ಲ ಅಂತಲ್ಲ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿರೋದು.ಕ್ರೈಮ್ ಮಾಡೋವಾಗ ಎಲ್ಲಿಗ್ ಹೋಗುತ್ತೋ ಎನೋ ನಿಮ್ಮ ಈ ಸಾಮಾಜಿಕ ಅಂಜಿಕೆಯ ಯೋಚನೆಗಳು.ನಿಮ್ಮಂತ ಅದೆಷ್ಟೋ ಜನರು ಇಲ್ಲಿಗೆ ಬರ್ತಾರೆ ಎಲ್ಲಾ ಹೇಳೋದು ಇದೇ ತರ ಹೋಗಿ ಕೂರಯ್ಯ ಸುಮ್ನೆ ತಲೆ ಎಲ್ಲಾ ಮಾತಾಡ್ಬೇಡ ಎಂದ ಪೇದೆ.ಯಾಕೆ ಸರ್ ಎನೇನೋ ಹೇಳ್ತಿದೀರಾ ನಾನೇನ್ ಕ್ರೈಮ್ ಮಾಡದೆ ಅಂತ ಹೀಗೆಲ್ಲಾ ಮಾತಾಡ್ತಾ ಇದೀರಾ!? ಅಂತ ಪ್ರತಿವಾದಕ್ಕಿಳಿದ ಆ ಕ್ಷಣವೇ ಹೊರಗೆ ಇನ್ಸ್ಪೆಕ್ಟರ್ ಗಾಡಿಯ ಶಬ್ದವಾಯಿತು.ಪೇದೆ ಇವನನ್ನು ಮತ್ತು ಇವನ ಮಾತುಗಳನ್ನು ಕಡೆಗಣಿಸಿ ಹೊರಗೆ ಹೋಗಿ ಇನ್ಸ್ಪೆಕ್ಟರ್ ಮುಂದೆ ನಿಂತು ಸೆಲ್ಯೂಟ್ ಹೊಡೆದ.
ಏನ್ರೀ ಆ ಕೊಲೆ ಕೇಸ್ ವಿಚಾರಣೆಗೆ ಅರವಿಂದ್ ಅನ್ನುವವರ ಮನೆಗೆ ಹೋಗಿ ಬನ್ನಿ ಅಂತ ಹೇಳಿದ್ದೆ ಏನಾಯ್ತು ಕೆಲಸ ಎಂದು ಇನ್ಸ್ಪೆಕ್ಟರ್ ಕೇಳಿದಾಗ, ಪೇದೆ ತಡಮಾಡದೇ ಒಳಗೆ ಇದ್ದಾನೆ ಸರ್ ಕರೆತಂದು ಎರಡು ಘಂಟೆ ಆಯಿತು.ಬೆಂಚ್ ಮೇಲೆಯೇ ಕೂತಿದ್ದಾನೆ ಎಂದ.ಇನ್ಸ್ಪೆಕ್ಟರ್ ಒಳಗೆ ಬರುತ್ತಿದ್ದಂತೆಯೇ ಅರವಿಂದ ಎದ್ದು ಅವರ ಹಿಂಬಾಲಿಸಿ ಹೋದ.ಇನ್ಸ್ಪೆಕ್ಟರ್ ನವೀನ್ ಹೋಗಿ ತಮ್ಮ ಕುರ್ಚಿಯ ಮೇಲೆ ಆಸೀನರಾದರು.ಇವನು ಅವರೆದುರೇ ನಿಂತ.ಇನ್ಸ್ಪೆಕ್ಟರ್ ಸುಮ್ಮನೆ ಕೂತಿದ್ದರು.ಇವನದೇನೋ ವಿಷಯ ಎತ್ತಲು ಹೊರಡುತ್ತಿದ್ದಂತೇ ಇನ್ಸ್ಪೆಕ್ಟರ್ ಬಾಯಿ ತೆರೆದು ರಾಮಣ್ಣನಿಗೆ ಇಂಟರೋಗೇಷನ್ ರೂಮ್ ತಯಾರಿಸಲು ಹೇಳಿದರು.ಒಕೆ ಸಾರ್ ಎಂದ ರಾಮಣ್ಣ ಕಾರ್ಯಕ್ಕೆ ತೆರಳಿದರು. ಇವನಿಗೆ ವಾಸ್ತವ ಅರ್ಥ ಆಗಲು ಒಂದೆರಡು ನಿಮಿಷ ಹಿಡಿಯಿತು.ಅರವಿಂದ್ ಬಂದು ಅದೇ ಬೆಂಚ್ ಮೇಲೆ ಮತ್ತೆ ಕೂತ ಯೋಚಿಸುತ್ತ,ಭವಿಷ್ಯದ ಬಗೆಗೆ ಮನಸ್ಸಿನೊಂದಿಗೆ ಚರ್ಚಿಸುತ್ತಾ....!