ವಿಷಯದ ಸುತ್ತ
ಪೋಲಿಸ್ ಸ್ಟೇಷನ್ ನಲ್ಲಿ ಅಮರ್ ಕೂತಿದ್ದ.ಇನ್ಸ್ಪೆಕ್ಟರ್ ನವೀನ್ ಅಮರ್ ಎದುರು ಬಂದು ಕುಳಿತರು.ನಿನ್ನೆ ರಾತ್ರಿ ನೀವೆ ತಾನೆ ಪೋಲಿಸ್ ಠಾಣೆಗೆ ಇನ್ಫೋರ್ಮ್ ಮಾಡಿದ್ದು? ಆದರೆ ನಮ್ಮ ರಾಮಣ್ಣ ನಿಮಗೆ ಆ ವಿಷಯದ ಬಗ್ಗೆ ಕೇಳಿದರೆ ನೀವು ಅಲ್ಲ ಎಂದು ಅಬದ್ಧ ನುಡಿದರಂತೆ!? ಎಂದು ಇನ್ಸ್ಪೆಕ್ಟರ್ ಪ್ರಶ್ನಿಸಿದರು. ಸರ್ ನಿಜವಾಗಿಯೂ ಹೇಳ್ತಾ ಇದ್ದೀನಿ ನಿನ್ನೆ ರಾತ್ರಿ ನಾನು ಆ ಕೊಲೆ ಆದ ಜಾಗದಲ್ಲೇ ಬಂದಿದ್ದಂತೂ ನಿಜ ಅದೇ ವಿಷಯಕ್ಕಾಗಿ ನಿಮ್ಮ ಕಾನ್ಸ್ಟೇಬಲ್ ರಾಮಣ್ಣ ನನ್ನ ವಿಚಾರಿಸೋಕೆ ಬಂದಿರ್ಬಹುದೇನೋ ಅಂದುಕೊಂಡೆ.ಆದರೆ ಇವರು ನಾನೇ ಅದರ ಬಗ್ಗೆ ಮಾಹಿತಿ ತಿಳಿಸಿದ್ದು ಅಂತ ಹೇಳಿ ಒಮ್ಮಲೆ ನನ್ನನ್ನೂ ಸಂಕೀರ್ಣ ಪರಿಸ್ಥಿತಿಗೆ ತಂದೊಡ್ಡಿದರು.ನಾನು ಡಾಟಾ ಎಂಟ್ರಿ ಕೆಲಸವನ್ನು ಮುಗಿಸಿ ರಾತ್ರಿ ಬರುವುದಕ್ಕೆ ೧೦ ಘಂಟೆಯಾಗಿತ್ತು.ನಾನು ಬರುವಾಗ ಅದೇ ದಾರಿಯಲ್ಲಿ ಬಂದಿದ್ದೇನೆ ಆದರೆ ಆ ಸಮಯದಲ್ಲಿ ಅಲ್ಲೇನೂ ಸಂಶಯಾಸ್ಪದ ಚಟುವಟಿಕೆಗಳು ಕಾಣಲಿಲ್ಲ.ಹೊರಗೆ ತಿಂದು ಬಂದವನಾಗಿದ್ದರಿಂದ ಮನೆಗೆ ಬಂದು ಫ್ರೆಶ್ ಆಗಿ ಸ್ವಲ್ಪ ಹೊತ್ತು ಟಿವಿ ನೋಡಿ ನಿದ್ರೆ ಹೋದೆ.ಬೆಳಗ್ಗೆ ಎದ್ದು ಟಿವಿ ನೋಡಿದಾಗ ಈ ವಿಷಯ ಗೊತ್ತಾಯಿತು ಎಂದ ಅಮರ್.
ಅರವಿಂದ್ ನನ್ನು ಜೈಲಿನಲ್ಲಿ ಇರಿಸಲಾಗಿತ್ತು.ಎಫ್.ಐ.ಆರ್ ದಾಖಲಿಸಲಾಗಿದ್ದಲಿಂದ ಅವನನ್ನು ಕೋರ್ಟ್ ಗೆ ಪ್ರೋಡ್ಯೂಸ್ ಮಾಡುವುದು ಕಾನೂನು.ಇತ್ತ ಅರವಿಂದ್ ನ ಸ್ನೇಹಿತರ ಹುಡುಕಾಟವೂ ನಡೆಯಿತು.ಪ್ರತಿಯೊಬ್ಬರನ್ನೂ ಠಾಣೆಗೆ ಕರೆದು ತರಲಾಯಿತು.ಅಂದು ರಾತ್ರಿ ಮೊದಲ ಮಾಹಿತಿ ನೀಡಿದ ವ್ಯಕ್ತಿ ಹೇಳಿದ ಅಡ್ರೆಸ್ ಅನ್ನು ಮತ್ತೊಮ್ಮೆ ಚೆಕ್ ಮಾಡಲು ಇನ್ಸ್ಪೆಕ್ಟರ್ ಮರು ಹೇಳಿದರು.ಅಡ್ರೆಸ್ ಬರೆದಿದ್ದ ರಿಜಿಸ್ಟರ್ ತೆಗೆದು ನೋಡಲಾಯಿತು. ಅದರಲ್ಲಿ ಇದ್ದ ವ್ಯಕ್ತಿಯ ಹೆಸರೂ ಅಮರ್ ಹಾಗೂ ಅಡ್ರೆಸ್ ನಲ್ಲೂ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಸರ್ ಇಲ್ಲಿ ಏನೂ ವ್ಯತ್ಯಾಸ ಆಗಲಿಲ್ಲ ನಾವು ಸರಿಯಾದ ಮನುಷ್ಯನನ್ನೇ ಹಿಡಿದುಕೊಂಡು ಬಂದಿದ್ದೇವೆ ಎಂದ ರಾಮಣ್ಣ.ಅಮರ್ ನನ್ನು ಅರವಿಂದ್ ಮೊದಲು ಕೂತಿದ್ದ ಜಾಗ ಅದೇ ಬೆಂಚ್ ಮೇಲೆ ಕುರಿಸಲಾಯಿತು.
ಇತ್ತ ಇನ್ಸ್ಪೆಕ್ಟರ್ ಮತ್ತು ರಾಮಣ್ಣ ಮಾತನಾಡತೊಡಗಿದರು. ಅಲ್ಲಾ ರಾಮಣ್ಣ ಅಮರ್ ರಾತ್ರಿ ಫೋನ್ ಮಾಡಿ ಕೊಲೆ ಮಾಹಿತಿ ನೀಡ್ಬಿಟ್ಟು ಈಗ ನೋಡಿದ್ರೆ ನಾನು ಮಾಹಿತಿ ತಿಳಿಸೇ ಇಲ್ಲ ಎನ್ನುತ್ತಿದ್ದಾನೆ. ಅಲ್ರೀ, ಕೊಲೆಗಾರ ಯಾರು ಅನ್ನೋ ನಿಗೂಢಕ್ಕಿಂತ ಮಾಹಿತಿ ನೀಡಿರೋರ್ಯಾರು ಅಂತ ತಿಳಿಯೋದೆ ಕಷ್ಟಕ್ಕೆ ಬಂತಲ್ರೀ . ಆದರೆ ಸರ್ ನನಗ್ಯಾಕೋ ಆ ಅಮರ್ ಮೇಲೆ ಡೌಟ್ ಅವನೇ ಕೊಲೆ ಮಾಡಿ ಅದು ತನ್ನ ಮೇಲೆ ಬರುತ್ತೆ ಅಂತ ಹೆದರಿ ನಮಗೆ ಮಾಹಿತಿ ನೀಡಿರಬಹುದು. ನಮ್ಮನ್ನೇ ದಿಕ್ಕು ತಪ್ಪಿಸೋ ಕೆಲಸ ನಡೀತಾ ಇರಬಹುದು. ಇಲ್ಲ ರಾಮಣ್ಣ ನೀವೊಂದು ವಿಷಯ ಮರೀತಾ ಇದೀರಾ ಅಮರ್ ಹೇಳಿರೋ ಪ್ರಕಾರ ಅವನು ರಾತ್ರಿ ೧೦ ಘಂಟೆಗೇ ಕೆಲಸ ಮುಗಿಸಿ ಬಂದಿದ್ದ.ಇತ್ತ ಕೊಲೆ ನಡೆದಿದ್ದು ಸುಮಾರು ೧೧ ರಿಂದ ೧ ರ ಸಮಯದಲ್ಲಿ ಯಾಕಂದರೆ ಅಲ್ಲಿರೋ ಬಾರ್ ಕ್ಲೋಸ್ ಅಗೋದು ೧೦.೩೦ಕ್ಕೆ.ಸಂಭವನೀಯ ವೇಳೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದ್ಮೇಲೆ ಗೊತ್ತಾಗುತ್ತೆ.ಅಮರ್ ಪರವಾಗಿ ಯೋಚಿಸೋದಾದರೆ ಯಾರೋ ಅಮರ್ ಗೆ ಆಗದ ವ್ಯಕ್ತಿ ಈ ಕೊಲೆ ಮಾಡಿ ಅದನ್ನು ಅಮರ್ ಮೇಲೆ ಹಾಕ್ಬೇಕು ಅಂತಾನೇ ಅಮರ್ ಹೆಸರು ವಿಳಾಸ ನೀಡಿರ್ಬಹುದು. ಇರಬಹುದ್ರೀ ಸರ್ ಯಾಕಂದ್ರೆ ಅವತ್ತು ರಾತ್ರಿ ಬಂದ ಫೋನ್ ಕಾಲ್ ಯಾವುದೋ ವಿದೇಶಿ ನಂಬರ್ ನಿಂದ ಬಂದಿತ್ತು. ನೀವೂ ಹೇಳೋ ಮಾತಿಗೂ ಇದು ಹೋಲಿಕೆಯಾಗುತ್ತೆ.
ಒಂದು ನಿಮಿಷ ಯೋಚಿಸಿದಂತೆ ಮಾಡಿ ಇದಕ್ಕೆಲ್ಲ ಉತ್ತರ ಸಿಗಬೇಕು ಅಂದರೆ ನಾವು ಅಮರ್ ಹಿನ್ನೆಲೆ ತಿಳಿದುಕೊಳ್ಬೇಕು ಹಾಗೂ ಅವನು ಅವತ್ತು ರಾತ್ರಿ ಎಷ್ಟರ ವೇಳೆಗೆ ಮನೆಗೆ ಬಂದಿದ್ದ ಅವನು ಸತ್ಯ ಹೇಳ್ತಾ ಇದ್ದಾನೋ ಇಲ್ವೋ ಅನ್ನೋದರ ಪರಾಮರ್ಶೆ ಮಾಡಿ ನೋಡಬೇಕು. ಅವೆಲ್ಲದಕ್ಕೂ ಮುಂಚೆ ಊಟ ಮಾಡ್ಬೇಕು ಎಂದು ಇನ್ಸ್ಪೆಕ್ಟರ್ ರಾಮಣ್ಣನ್ನ ನೋಡ್ತಾ ಮುಗುಳ್ನಕ್ಕರು.ಹೌದು ಸರ್ ನಿಮಗೆ ಏನ್ ತರಬೇಕು ಅಂತ ಹೇಳಿ ತರೋದಕ್ಕೆ ಹೇಳ್ತೀನಿ ಎಂದರು ರಾಮಣ್ಣ.
ಇತ್ತ ಅರವಿಂದ್ ಸ್ನೇಹಿತರು ಪೋಲಿಸ್ ಠಾಣೆಗೆ ಆಗಮಿಸಿದ್ದರು.ಅವರುಗಳಿಗೆ ಇದೇ ವಿಷಯದ ಬಗ್ಗೆ ವಿಚಾರಿಸಲಾಯ್ತು.ಅವರೂ ಅರವಿಂದ್ ಹೇಳಿದ್ದನ್ನೇ ಚಾಚೂ ತಪ್ಪದೆ ನುಡಿದರು. ಸಂಶಯಾಸ್ಪದ ವ್ಯಕ್ತಿಗಳು ಎಂದು ಅವರನ್ನು ಠಾಣೆಯಲ್ಲೇ ಇರಿಸಿಕೊಳ್ಳಲಾಯಿತು.ಪೋಲಿಸ್ ಠಾಣೆಯ ಕೆಲಸಗಳೇ ಹೀಗೆ ಯಾವಾಗ ಯಾರು ಎಷ್ಟು ಹೊತ್ತು ಕಾಯಬೇಕಾಗುತ್ತೆ ಎನೂ ಅನ್ನೋದೆ ಗೊತ್ತಾಗಲ್ಲ.ಅನಿರೀಕ್ಷಿತವಾಗಿ ಎನೇನೋ ನಡೆಯುತ್ತಾ ಇರುತ್ತೆ.ಇನ್ಸ್ಪೆಕ್ಟರ್ ಗೆ ಕ್ಷಣಕ್ಕೆ ಎನೋ ಹೊಳೆದಂತಾಗಿ ಡ್ರೈವರ್ ಗೆ ಜೀಪ್ ತೆಗೆಯಲು ಹೇಳಿದರು.ಇತ್ತ ರಾಮಣ್ಣ ಬಡಬಡಿಸಿ ಬಂದು ಜೀಪ್ ಹತ್ತಿ ಹಿಂದೆ ಕೂತರು.ಕೊಲೆ ನಡೆದ ಜಾಗಕ್ಕೆ ಜೀಪ್ ತಿರುಗಿಸು ಎಂದು ಇನ್ಸ್ಪೆಕ್ಟರ್ ಹೇಳಿದರು. ಕೊಲೆ ನಡೆದ ಜಾಗದಲ್ಲಿ ಸಿಸಿ ಟಿವಿ ಎನಾದರೂ ಇರಬಹುದೇನೋ ಅಥವಾ ಅಲ್ಯಾವುದಾದರೂ ಅಂಗಡಿಗಳ ಸಿಸಿ ಟಿವಿ ಕಣ್ಣು ಇತ್ತ ಮುಖ ಮಾಡಿರಬಹುದೇನೋ ಎಂಬ ಯೋಚನೆಯ ಮೇರೆಗೆ ಅಲ್ಲಿ ಹೋಗಿದ್ದರು. ಅವರ ಯೋಚನೆ ನಿಜವೇ ಆಯಿತು.