ಹಸಿದು ಕೂತವರು - ಭಾಗ 7 (The crime story in kannada (The Quiet Before the Crime))

March 25, 2019 (6y ago)

ಆನಿಮೇಟೆಡ್‌ ಕಿರುಚಿತ್ರ

"" ಕಥೆಯಿದು ಅಂತ್ಯವಿಲ್ಲದ ಕಥೆ. ಕ್ರೋಧ ವಧಿಸಿ ವಿಧಿಯೇ ವಿಧಿಸಿದ ಕಥೆ. ಅಶ್ರುಗಳ ವ್ಯಯದ ನಡುವೆಯೂ ದಕ್ಷ ಕ್ರಿಯೆ ನಡೆದ ಕಥೆ ""

ನಿರ್ಮಲಾ ಹಸುಳೆಗೆ ಹಾಲುಣಿಸುತ್ತಿದ್ದಳು.ಬಡತನದ ಬವಣೆಯಲ್ಲಿ ಜೀವನ ನಡೆಸುವುದು ಹುಟ್ಟಿನಿಂದ ಒಗ್ಗಿ ಹೋಗಿತ್ತು. ಇವತ್ತು ಊಟ ಇಲ್ವಾ!? ಪರವಾಗಿಲ್ಲ ಗಂಜಿ ಕುಡಿದುಕೊಂಡು ಮಲ್ಗ್ತೀನಿ. ಓ ಗಂಜಿನೂ ಇಲ್ವ!? ಪರವಾಗಿಲ್ಲ ಬಿಡು ನಮಗೇನ್ ಇದು ಹೊಸದಾ? ನೀರು ಕುಡಿದು ಮಲ್ಗ್ತೀನಿ .ನಾಳೆ ಬೆಳಿಗ್ಗೆ ಎದ್ದು ಏನೂ ಅಂತ ನೋಡಿದ್ರಾಯಿತು. ಒಂದು ದಿನ ಊಟ ಮಾಡಿಲ್ಲ ಅಂದ್ರೆ ನಾವೇನ್ ಸತ್ತು ಹೋಗ್ತೀವಾ?‌ ಇಲ್ಲಾ ತಾನೆ‌. ಎನ್ನುವ ಬಡತನದ ಮಾತುಗಳು. ಇವತ್ತು ದುಡಿದರೆ ಊಟ.ಹಣ ಸಂಗ್ರಹಿಸಿ ಇಡುವ ಮಾತುಗಳೇ ಇಲ್ಲ. ದುಡಿದ ಹಣ ಇಂದಿನ ಊಟಕ್ಕೆ ಸಾಕಾದರೆ ತಾನೇ ಕೂಡಿಡೋದು!? ಒಂದು ದಿನ ಹುಷಾರಿಲ್ಲ ಅಂತ ಮನೇಲೆ ಇದ್ರೆ, ಹುಷಾರಿಲ್ಲದೆ ಪರಿತಪಿಸೋದಕ್ಕಿಂತ ಊಟ ಇಲ್ಲವಲ್ಲ ಎಂದು ಅದರ ಬೇಗೆಯಿಂದ ಸುಟ್ಟುಹೋಗುವುದೇ ಜಾಸ್ತಿಯಾಗಿತ್ತು. ಇರಲಿ ಬಿಡಿ ಬೇರೆ ಯಾರಾದರೊಬ್ಬರ ಮನೆಗೆ ಹೋಗಿ ತರೋಣ ಎಂದರೆ ನೆರೆಹೊರೆಯವರ ಸ್ಥಿತಿ‌ ಇವರಿಗಿಂತ ಕ್ರೂರವಾಗಿರುತ್ತಿತ್ತು. ಇನ್ನು ಶ್ರೀಮಂತ ವರ್ಗದವರು ಇವರನ್ನು ಭಿಕ್ಷುಕರೆಂದುಕೊಂಡು ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಇವರೋ ಸ್ವಾಭಿಮಾನದಲ್ಲಿ ಎಲ್ಲರಿಗಿಂತ ಒಂದು ಕೈ ಶ್ರೀಮಂತರು.

ನಿರ್ಮಲಾ ಮಗನನ್ನು ಕಾಲಮೇಲೆ ಹಾಕಿಕೊಂಡು ತಟ್ಟಿ ತಟ್ಟಿ ಮಗನನ್ನು ನಿದ್ರಾ ಲೋಕಕ್ಕೆ ಕಳಿಸೋ ಪ್ರಯತ್ನ ಮಾಡಿದಳು. ಸ್ವಲ್ಪ ಹೊತ್ತು ಹೋದ ನಂತರ ಇವಳ ಪ್ರಯತ್ನ ವಿಜಯ ಸಾಧಿಸಿತ್ತು.ಅವನನ್ನು ಹಾಸಿಗೆಯ ಮೇಲೆ ಮಲಗಿಸಿ ಬಂದು ನಿಧಾನವಾಗಿ ಯಾವುದೇ ಪಾತ್ರೆಗಳ‌ ಸಪ್ಪಳ ಮಾಡದೇ ನಿರ್ಮಲಾ ಕರೆದಳು ರೀ ಊಟಕ್ಕೆ ಹಾಕಿದೀನಿ ಬಂದು ಊಟ ಮಾಡಿ. ಏನ್ ಮಾಡಿದೀಯಾ ?! ಅದೇ ಅನ್ನ ಅದೇ ಸಾಂಬಾರು ಅಷ್ಟೇ ತಾನೆ? ಎಂದು ಧೀರಜ್ ಕೇಳಿದ. ಹುಂ ನೀವು ನಿನ್ನೆ ಚಿಕನ್‌ ತಂದಿದ್ದರಲ್ಲಾ ಅದ್ನೇ ಹಾಕಿ ಸಾಂಬಾರು ಮಾಡಿದೀನಿ ಎಂದು ಹಾಸ್ಯ ಮಾಡಿದಳು. ಅದೇ ಸಾಂಬಾರು ಎಂದ ಧೀರಜ್ ನಾಲ್ಕು ಬಾರಿ ಹಾಕಿಸಿಕೊಂಡು ತಿಂದಿದ್ದ. ನಿನಗೆ ಆಗೋ ಅಷ್ಟು ಇದೆ ಅಲ್ವಾ ಎಂದು ಅವನ ಊಟ ಮುಗಿಸುವ ಸಮಯದಲ್ಲಿ ಕೇಳಿದ. ಇದೆ ಬಿಡ್ರೀ ನೀವು ಊಟ ಮಾಡಿ ನಂಗೇನೂ ಈ ಸಾಂಬಾರು ಅಷ್ಟು ಇಷ್ಟ ಆಗೋದಿಲ್ಲ ಎಂದು ಸುಳ್ಳು ಹೇಳಿದಳು.

( ಭಾರತೀಯ ಸಂಪ್ರದಾಯದ ) ಹೆಂಗಸರು ಯಾವಾಗಲೂ ಹೀಗೆ. ಪತಿಗೆ ಇಷ್ಟವಾಗಿದ್ದರೆ ಅವರು ತಿನ್ನಲಿ ಎನ್ನುವ ಒಂದೇ ಕಾರಣಕ್ಕೆ ನಂಗೆ ಅದು ಇಷ್ಟ ಇಲ್ಲ‌ ನೀವೇ ತಿಂದುಬಿಡಿ ನಾನು ಗಂಜಿ ಊಟ ಮಾಡ್ತೀನಿ ಇವತ್ತು ಅಷ್ಟೇನೂ ಹಸಿವು ಇರೋ ತರ ಕಾಣ್ತಾ ಇಲ್ಲ‌ ಎಂದು ಸುಳ್ಳು ಹೇಳುತ್ತಾರೆ. ಎಷ್ಟು ಚಂದ ಆ ಪ್ರೀತಿ !? ವಿಶ್ವಾಸಗಳ ಬಂಧ.‌

ಅವಳು ಇದ್ದದರುಲ್ಲೇ ಊಟ ಮಾಡಿ ಮಲಗಿದಳು.ಅವನು ಅದಾಗಲೇ ಮಲಗಿ ನಿದ್ದೆ ಹೋಗಿದ್ದ. ಮಲಗಿದ ತಕ್ಷಣ ಅವಳಿಗೆ ನಿದ್ರೆ ಬಂದಿರಲಿಲ್ಲ. ತಮ್ಮ ಜೀವನ ಸ್ವಲ್ಪ ಸುಧಾರಿಸಿದ್ದರೂ ಮಗನ ವಿದ್ಯಾಭ್ಯಾಸ ಎಲ್ಲಾ ಚೆನ್ನಾಗಿ ನಡೆಯುತ್ತೆ.ಅವನು ನಮ್ಮ ಬಡತನದ ರೇಖೆಯನ್ನು ಅಳಿಸಿ ಹಾಕಿ ಸುಖದ ಜೀವನ‌ ನಡೆಸಿದರೆ ನಮ್ಮ ಜೀವನಕ್ಕೆ ಒಂದು ಅರ್ಥ ಸಿಗುತ್ತೆ. ನಾವಂತೂ ಜೀವನದುದ್ದಕ್ಕೂ ಕಷ್ಟವನ್ನೇ ಬಂಧುವಾಗಿಸಿ ಬೆಳೆದವರು. ಅವನ‌ ಜೀವನವಾದರೂ ಚೆನ್ನಾಗಿರಲಿ.ಅವನಿಗೆ ಇದ್ಯಾವ ಕಷ್ಟಗಳ ಅನುಭವ ಕೂಡ ಆಗಬಾರದೆಂಬ ಯೋಚನೆ ಹರಿಯಿತು. ಎಲ್ಲಾ ತಂದೆ ತಾಯಿಯರೂ ಇಷ್ಟೇ.ಜೀವನದಲ್ಲಿ ತಾವುಗಳು ಅದೆಷ್ಟೇ ಕಷ್ಟ ಕೋಟಲೆ ಎದುರಿಸಿದ್ದರೂ ತಮ್ಮ ಮಕ್ಕಳು ಅದ್ಯಾವುದರ ಸೋಂಕು ತಗುಲಬಾರದು ಎಂದು ಕಷ್ಟ ಪಡುತ್ತಿರುತ್ತಾರೆ. ಜೀವನವೇ ಮುಡಿಪಾಗಿಟ್ಟು ಅದನ್ನು ಸಾಧಿಸಿ ತೋರಿಸುತ್ತಾರೆ. ಇವರುಗಳ ಮಾತುಗಳು ತೋರಿಕೆಯ ಮಾತುಗಳಲ್ಲ.