ಹಸಿದು ಕೂತವರು - ಭಾಗ 9 (The crime story in kannada (The Quiet Before the Crime))

March 27, 2019 (6y ago)

ಕರಾಳ ದಿನ

ಸಂಚು ಕಾರ್ಯರೂಪಕ್ಕೆ ತರಲು ಸಮಯವೇನೂ ಹಿಡಿಯಲಿಲ್ಲ.ಅಪ್ಪಯ್ಯ ದೀಕ್ಷಿತ್ ಕೊಲ್ಲಲು ಇಬ್ಬರು ಹೊರಟು ನಿಂತರು.ಅವರ ಮೇಲೆ ಸಂಶಯ ಬರಬಾರದು ಎಂಬ ಒಂದೇ ಕಾರಣದಿಂದ ಒಂದು ಸುಳ್ಳು ಹೇಳಲಾಯಿತು. ಒಬ್ಬನಿಗೆ ಚಳಿ ಜ್ವರದಿಂದ ನಡುಗುತ್ತಾ ಇದ್ದಾನೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀನಿ ಎಂದು ಉಳಿದ ಎರಡು ಜನರ ಹತ್ತಿರ ದೊಡ್ಡದಾಗಿ ಹೇಳಿದ ಧೀರಜ್ ಗೆ ಕೇಳುವಂತೆ. ಇವರು ಹೊರಟರು, ಅತೀವವಾಗಿ ಅಪ್ಪಯ್ಯ ದೀಕ್ಷಿತ್ ಅವರನ್ನು ಕ್ರಾಸ್ ಮಾಡ ಬೇಕಿತ್ತು. ಮುಖಕ್ಕೆ ಕಪ್ಪು ಬಣ್ಣದ ಮುಸುಕು ಹಾಕಿಕೊಂಡು , ಕೈಯಲ್ಲಿ ಆಯುಧ ಹಿಡಿದು ಅತಿವೇಗದಿಂದ ಅಪ್ಪಯ್ಯ ದೀಕ್ಷಿತ್ ಹೋಗುತ್ತಿದ್ದ ಗಾಡಿಯ ಹಿಂದೆಯೇ ಇವರು ಕದ್ದು ಗಾಡಿಯ ಮೇಲೆ ಸಾಗುತ್ತಿದ್ದರು.ಸರಿಯಾದ ಸ್ಥಳದ ನಿರೀಕ್ಷೆಯಲ್ಲಿ ಗಾಡಿ ಮುಂದೆ ಸಾಗುತ್ತಿತ್ತು.

ಪಾಪ ಅಪ್ಪಯ್ಯ ದೀಕ್ಷಿತ್ ಅವರಿಗೆ ಇದ್ಯಾವುದರ ಪರಿವೂ ಇರಲಿಲ್ಲ. ಸಾವು ಬೆನ್ನು ಹತ್ತಿ ಬರುತ್ತಿತ್ತು. ಮನುಷ್ಯನ ಜೀವನವೇ ಹೀಗೆ ಸಾವು ಎದುರಲಿದ್ದರೂ ತಿಳಿಯುವ ಸಮಯದಲ್ಲಿ ಸಾವನ್ನು ಎದುರಿಸಿರುತ್ತೇವೆ. ಅಪ್ಪಯ್ಯ ದೀಕ್ಷಿತ್, ಬದುಕಿಗೆ ವಿದಾಯ ಹೇಳುವ ಸಮಯ ಹತ್ತಿರ ಬಂದಿತ್ತು. ಮುಸುಕು ಧಾರಿಗಳು ಎದುರು ನಿಂತಿದ್ದರು.ಅಪ್ಪಯ್ಯ ದೀಕ್ಷಿತ್ ಅವರ ಗಾಡಿ ನಿಂತಿತು. ಮುಸುಕು ಧಾರಿಗಳು ನೋಡ ನೋಡುತ್ತಿದ್ದ ಸಮಯದಲ್ಲಿ ಗಾಡಿ ಡ್ರೈವರ್ ಓಡಿ ಹೋಗಲೆತ್ನಿಸಿ ಮುಂದೆ ಇದ್ದ ಕಲ್ಲಿಗೆ ಎಡವಿದ. ಎಡವಿದ ಹೊಡೆತಕ್ಕೆ ಹೋಗಿ ತಲೆಯನ್ನು ಕಲ್ಲಿಗೆ‌‌ ಹೊಡೆಸಿಕೊಂಡ. ಸುಧಾರಿಸಿಕೊಳ್ಳುವ ಸಮಯದೊಳಗೇ ಅವನ ಮೇಲೆ ಇನ್ನೊಂದು ಬಂಡೆಯನ್ನು ಮೇಲಿನಿಂದ ಉರುಳಿಸಲಾಯಿತು.ಡ್ರೈವರ್ ಕಥೆ ಮುಗಿದಿತ್ತು.

ಇತ್ತ‌‌ ಅಪ್ಪಯ್ಯ ದೀಕ್ಷಿತ್ ತನ್ನ ಜೀವಕ್ಕೆ ಆಪತ್ತು ಬಂದೆರಗಿರುವುದು ಖಾತರಿಪಡಿಸಿಕೊಂಡಿದ್ದೇ ತಡ ಓಡಿ ಹೋಗಲೆತ್ನಿಸಿದರು. ಒಬ್ಬ ಬಂದು ಇವರನ್ನು ಬಿಗಿ ಹಿಡಿತದಿಂದ ಬಂಧಿಸಿದ.ಇನ್ನೊಬ್ಬ ಬಂದು ಇವರನ್ನು ಚೂರಿಯಿಂದ ಹೊಟ್ಟೆಗೆ ಇರಿದ.ಅಪ್ಪಯ್ಯ ದೀಕ್ಷಿತ್ ನನ್ನನ್ನು ಏನೂ ಮಾಡದಿರಿ ಎಂದು ಗೋಗರೆಯುತ್ತಿದ್ದ.ಅವನ ಆಕ್ರಂದನ ಮುಗಿಲು ಮುಟ್ಟಿತ್ತು. ನಮ್ಮಲ್ಲಿ ಒಂದು ಮಾತಿದೆ ಒಬ್ಬ ಒಳ್ಳೆಯ ವ್ಯಕ್ತಿಯ ಕೂಗಿಗೆ ಜೀವ ಜಂತುಗಳೂ ಸ್ಪಂದಿಸುತ್ತವೆ ಎಂದು.ಅವರಲ್ಲೊಬ್ಬ ಚೂರಿಯಿಂದ ಇನ್ನೆರಡು ಬಾರಿ ನಿರ್ದಾಕ್ಷಿಣ್ಯವಾಗಿ ಇರಿದ.ಅಪ್ಪಯ್ಯ ದೀಕ್ಷಿತ್ ಅವರ ಪ್ರಾಣ ಪಕ್ಷಿ ಹಾರಿ ಹೋಯಿತು.ಜೀವ ಜಂತುಗಳೂ ಅಶ್ರುವಿನ ಮಳೆ ಸುರಿಸುವಂತೆ.ಕಾರ್ಮೋಡ ದಿಗಿಲಿನಿಂದ ಕಂಪಿಸತೊಡಗಿತ್ತು.ಭೂ ತಾಯಿಯ ಕೊರಗು ಮಾರ್ದನಿಸುವಂತಿತ್ತು.ಅಪ್ಪಯ್ಯ ದೀಕ್ಷಿತ್ ಇಹಲೋಕ ಯಾತ್ರೆ ಮುಗಿಸಿ ನಡೆದಿದ್ದರು.ಭೂ ತಾಯಿ ಒಂದು ಅನರ್ಘ್ಯ ರತ್ನ ಕಳೆದುಕೊಂಡ ಚಿಂತನೆಯಲ್ಲಿ ಮುಳುಗಿದ್ದಳು.

ಹಂತಕರ ಯೋಚನೆ ಮುಂದುವರಿಯಿತು. ಅಪ್ಪಯ್ಯ ದೀಕ್ಷಿತ್ ಕೊಲೆ ಮಾಡಿದ್ದು ಡ್ರೈವರ್ ಎಂದು ಸಾಧಿಸಿಬಿಟ್ಟರೆ,ಕೆಲಸ ಇನ್ನೂ ಸುಲಭವಾಗುತ್ತದೆ ಎಂದು ಚೂರಿಯನ್ನು ಡ್ರೈವರ್ ಕೈನಲ್ಲಿ ಹಿಡಿಸಲಾಯಿತು.ಯಾವುದೇ ಸುಳಿವು ಇರಿಸದೇ ಯೋಜನೆಯಲ್ಲಿ ವ್ಯತ್ಯಾಸ ಎಂಬಂತೆ ಅವರನ್ನು ಸುಟ್ಟು ಹಾಕದೇ ಹಾಗೆಯೇ ಬಿಟ್ಟು ಹೊರಟರು.ಅಪ್ಪಯ್ಯ ದೀಕ್ಷಿತ್ ಅವರ ಮನೆ ಮಸಣದ ವಾಸನೆ ಹೊತ್ತು ನಿಂತಿತ್ತು.ಶಾಂತಿ ಎಲ್ಲೆಡೆ ಪಸರಿಸಿತ್ತು.ಧೀರಜ್ ಇತ್ತ ಅದ್ಯಾವುದೇ ವ್ಯತ್ಯಾಸ ಇಲ್ಲದಂತೆ ತನ್ನ ಕೆಲಸದಲ್ಲಿ ಲೀನನಾಗಿದ್ದ. ಮಧ್ಯಾಹ್ನದ ವೇಳೆಗೆ ಮನೆಗೆ ಹೋಗಿ ಊಟ ಮಾಡುವ ನೆಪದಲ್ಲಿ ಮಗನನ್ನು ಆಟವಾಡಿಸಿದ.ತದನಂತರ ಸ್ವಲ್ಪ ಮಟ್ಟಿಗೆ ವಿಶ್ರಾಂತಿ ಪಡೆದು ಕೆಲಸಕ್ಕೆ ಮತ್ತೆ ಬಂದಿದ್ದ.

ಸಂಜೆ ಸಮಯ ಸುಮಾರು ೬ ಘಂಟೆ‌.ಮನೆಯಲ್ಲಿಯೇ ಇರುವ ಇಬ್ಬರು ಹಂತಕರ ಪೈಕಿ ಒಬ್ಬ ಓಡಿ ಬಂದು ನಿಟ್ಟುಸಿರು ಬಿಡುತ್ತಾ "ಅಮ್ಮಾ ಅಲ್ಲಿ .. ಅಲ್ಲಿ ....ಹಂ ಹೇಗೆ ಹೇಳಲಿ!?" ಯಾಕೋ ಏನಾಯ್ತೋ ಅದೇನು ಅಂತ ಬಿಡಿಸಿ ಹೇಳು.ಎಂದು ಅಪ್ಪಯ್ಯ ದೀಕ್ಷಿತ್ ಅವರ ಪತ್ನಿ ಕೇಳಿದಳು."ಯಜಮಾನ್ರನ್ನ ಯಾರೋ ಕೊಂದು ಹಾಕಿದಾರಂತೆ ಊರಿನಲ್ಲಿ ಎಲ್ಲಾ ಮಾತಾಡ್ತಾ ಇದಾರೆ. ವಿಷಯ ಗೊತ್ತಾದ ತಕ್ಷಣ ‌ನಿಮಗೆ ಹೇಳ್ಬೇಕು ಅಂತ ಓಡಿ ಓಡಿ ಬಂದೆ" ಅಪ್ಪಯ್ಯ ದೀಕ್ಷಿತ್ ಪತ್ನಿ ಕುಸಿದು ಬಿದ್ದಳು.ಮನೆಯ ಒಳಗಿನಿಂದ ಇವುಗಳನ್ನು ಆಲಿಸುತ್ತಿದ್ದ ಅವರ ಮಗ ಬಂದು ತಾಯಿಯನ್ನು ಸಮಾಧಾನ ಮಾಡಲೆತ್ನಿಸಿದ.ಒಂದೆಡೆ ತಂದೆಯನ್ನು ಕಳೆದುಕೊಂಡ ಕರಾಳ ಯೋಚನೆಯು ಕರೆಂಟ್ ಹಾದು ಹೋದಂತೆ ಹೋಗುತ್ತಿತ್ತು‌.ಈಗ ತಾಯಿಯೂ ಪ್ರತಿಕ್ರಿಯೆ ನೀಡುತ್ತಿಲ್ಲ.ಜಗತ್ತಿನ ಎಲ್ಲ ಕಷ್ಟ ಕೋಟಲೆಗಳು ತನಗೇ ಬಂದೆರಗಿದೆ ಎನ್ನುವ ಭಾವವದು.